ದುಬೈ, ಜನವರಿ 16: ಕಳೆದ ವರ್ಷಾಂತ್ಯದಲ್ಲಿ ಬರಸಿಡಿಲಿನಂತೆರಗಿದ ನಾಡಿನ ಇಬ್ಬರು ಗಣ್ಯರ ನಿಧನದ ಸುದ್ದಿ ಕನ್ನಡಿಗರ ಪಾಲಿಗೆ ಕರಾಳವೇ ಸರಿ. ಅಗಲಿದ ಈ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಯು.ಎ.ಇ.ಯ ಧ್ವನಿ ಪ್ರತಿಷ್ಠಾನ ನಿನ್ನೆ ಆಯೋಜಿಸಿತ್ತು.
ಶುಕ್ರವಾರ ಸಂಜೆ ಶಾರ್ಜಾ ನಗರದ ಅರಬ್ ಉಡುಪಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಧ್ವನಿ ಪ್ರತಿಷ್ಠಾನದ ಶ್ರೀ ಪ್ರಕಾಶ್ ರಾವ ಪಯ್ಯಾರ್, ಶ್ರೀ ಅಶೋಕ್ ಶೆಟ್ಟಿ ಹಾಗೂ ಶ್ರೀ ಶ್ರೀ ಜಯರಾಮ ಸೋಮಯಾಜಿಯವರು ಉಪಸ್ಥಿತರಿದ್ದರು.

ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರು ದಿವಂಗತರ ಭಾವಚಿತ್ರಗಳಿಗೆ ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಶ್ರೀಮತಿ ಸೋನಿಯಾ ಗೌತಮ್ ರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು.

ದಿವಂಗತರ ಕಿರು ಪರಿಚಯವನ್ನು ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರು ನೀಡಿದ ಬಳಿಕ ಸಭಾಂಗಣದ ಸಕಲರೂ ಎದ್ದುನಿಂತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಅಗಲಿದ ಆತ್ಮಗಳಿಗೆ ಶಾಂತಿ ಕೋರಲಾಯಿತು.



ಪ್ರಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ ದಿವಂಗತ ಡಾ. ವಿಷ್ಣುವರ್ಧನ್ ರವರು 2003 ರಲ್ಲಿ ನೀಡಿದ ಭೇಟಿಯನ್ನು ನೆನೆಸಿಕೊಂಡು ಅವರ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು. ಅಂದಿನ ಸಮಾರಂಭದಲ್ಲಿ ಅವರು ಕನ್ನಡ ಭಾಷೆಗೆ ನೀಡಿದ ಮಹತ್ವ, ಮನೆಯವರೊಂದಿಗಿನ ಅವರ ಅನನ್ಯ ಬಾಂಧವ್ಯ, ಒಡನಾಡಿಗಳೊಡಣ ಪ್ರೀತಿ ವಾತ್ಸಲ್ಯಗಳ ಬಗ್ಗೆ ವಿವರಣೆ ನೀಡಿದರು.

ಬಳಿಕ ಮಾತನಾಡಿದ ಶ್ರೀ ಅಶೋಕ್ ಶೆಟ್ಟಿಯವರು ಯು.ಎ.ಇ.ಯಲ್ಲಿ ಸಾಂಸ್ಕೃತಿಕ ಸಮಾರಂಭಗಳು ಬೇಕಾದಷ್ಟು ಜರುಗುತ್ತವೆ, ಆದರೆ ನಾಡಿನ ಗಣ್ಯರು ಇಲ್ಲವಾದಾಗ ಸಂತಾಪಸಭೆಯನ್ನು ನಡೆಸುತ್ತಿರುವಲ್ಲಿ ಧ್ವನಿ ಪ್ರತಿಷ್ಠಾನ ಪ್ರಥಮವಾಗಿದೆ ಎಂದು ತಿಳಿಸಿದರು. ಯು.ಇ.ಯಲ್ಲಿರುವ ಸಕಲ ಸಂಘಟನೆಗಳು ಒಂದಾಗಿ ಶೃದ್ಧಾಂಜಲಿ ಅರ್ಪಿಸಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅವರು ಪ್ರಕಟಿಸಿದರು.

ಬಳಿಕ ಮಾತನಾಡಿದ ಶ್ರೀ ಜಯರಾಮ ಸೋಮಯಾಜಿಯವರು ಕಳೆದ ವರ್ಷದ ಅಂತ್ಯದಲ್ಲಿ ಇಬ್ಬರು ದಿಗ್ಗಜರನ್ನು ಕಳೆದುಕೊಂಡ ಬಳಿಕ ಕನ್ನಡನಾಡು ಬಡವಾಗಿದೆ, ಅವರ ಸ್ಥಾನಗಳನ್ನು ಸಮರ್ಥವಾಗಿ ತುಂಬಬಲ್ಲವರು ಸಧ್ಯಕ್ಕೆ ಯಾರೂ ಇಲ್ಲ ಎಂದು ತಿಳಿಸಿದರು. ಸಂತಾಪಸೂಚಕ ಸಭೆ ಏರ್ಪಡಿಸಿ ಕನ್ನಡಿಗರು ದುಃಖದ ಸಮಯದಲ್ಲಿಯೂ ಒಂದಾಗಿರಲು ಶ್ರಮಿಸಿದ ಶ್ರೀ ಪಯ್ಯಾರ್ ರವರ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಬಳಿಕ ಮಾತನಾಡಿದ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈಯವರು ತಮ್ಮ ನೆನಪಿನ ಬುತ್ತಿ ಬಿಚ್ಚಿ ಹಲವು ಆತ್ಮೀಯ ವಿಷಯಗಳನ್ನು ವಿಶದಪಡಿಸಿದರು. ವಿಷ್ಣುವರ್ಧನ್ ರವರು ಕೊಡಗಿಗೆ ಬಂದಿದ್ದಾಗ ತಮ್ಮೊಂದಿಗೆ ಕಳೆದ ಆ ಕ್ಷಣಗಳನ್ನು ಅವರು ಸಭೆಯಲ್ಲಿ ವಿವರಿಸಿದ ಪರಿ ಕೊಡಗಿನ ಸೊಬಗನ್ನು ಕಣ್ಣಿಗೆ ಕಟ್ಟಿದಂತಿತ್ತು. ಅಲ್ಲದೇ ವಿಷ್ಣುವರ್ಧನ್ ಹಾಗೂ ಅಶ್ವಥ್ ರವರ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ಅವರು ಒದಗಿಸಿದರು.

ಬಳಿಕ ಮಾತನಾಡಿದ 105.4 ರೇಡಿಯೋ ಸ್ಪೈಸ್ ನಿರ್ದೇಶಕರಾದ ಶ್ರೀ ಹರ್ಮನ್ ಲೂವಿಸ್ ರವರು ಮಾತನಾಡಿ ಸಂತಾಪ ಸೂಚಕ ಸಭೆಗೆ ಆಗಮಿಸಿದವರ ಸಂಖ್ಯೆ ಕಡಿಮೆಯಿದ್ದರೂ ಒಬ್ಬೊಬ್ಬರು ಸಾವಿರ ಕನ್ನಡಿಗರಿಗೆ ಸಮ ಎಂದು ತಿಳಿಸಿದರು. ಯು.ಎ.ಇ.ಯಲ್ಲಿ ಕೊಂಕಣಿ, ತುಳು, ಕನ್ನಡ, ಬ್ಯಾರಿ ಭಾಷೆಗಳ ಹಲವು ಸಂಘಟನೆಗಳಿದ್ದರೂ ನಾವೆಲ್ಲರೂ ಮೊದಲಿಗೆ ಕನ್ನಡಿಗರು, ಈ ಹೊತ್ತಿನಲ್ಲಿ ಎಲ್ಲಾ ಸಂಘಟನೆಗಳು ಒಂದುಗೂಡಿ ಸಂತಾಪಸೂಚಕ ಸಭೆ ನಡೆಸಿದರೆ ಉತ್ತಮ ಎಂದು ಕರೆ ನೀಡಿದರು. ದಿವಂಗತರ ಆದರ್ಶಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಾವು ಅವರಿಗೆ ನೀಡಬಹುದಾದ ನಿಜವಾದ ಶೃದ್ಧಾಂಜಲಿ ಎಂದು ಅವರು ತಿಳಿಸಿದರು.

ಶ್ರೀ ಗೌತಮ್ ಅತ್ರೇಶ್ ರವರು ಬೆಂಗಳೂರಿನಲ್ಲಿದ್ದಾಗ ಶ್ರೀ ಅಶ್ವಥ್ ರವರ ನಿಕಟವರ್ತಿಗಳಾಗಿದ್ದು ಅಶ್ವಥ್ ರವರ ಹಲವು ಹಾಸ್ಯಪ್ರಸಂಗಗಳನ್ನು ವಿವರಿಸಿದರು. ಒಮ್ಮೆ ಅಶ್ವಥ್ ರವರ ಮನೆಗೆ ಹದಿಮೂರು ತರುಣರು ಬಂದಿದ್ದರಂತೆ, ಅವರಲ್ಲೊಬ್ಬರು ಅಶ್ವಥ್ ರವರನ್ನು ಉದ್ದೇಶಿಸಿ ’ ಸರ್, ತಾವು ಸಿನೇಮಾದಲ್ಲಿಯೇ ಒಂದು ತರಹ, ನಿಜರೂಪದಲ್ಲಿ ಇನ್ನೊಂದು ತರಹ ಕಾಣುತ್ತಿದ್ದೀರಲ್ಲಾ ’ ಎಂದರಂತೆ, ಪುಣ್ಯಾತ್ಮ, ಹೆಸರು ಒಂದೇ ಆಗಿದ್ದರೂ ಇಬ್ಬರೂ ಬೇರೆ ಬೇರೆ ಎಂದು ಅರಿಯದವನಾಗಿದ್ದ. ಎಲ್ಲರಿಗೂ ಜ್ಯೂಸ್ ಕುಡಿಸಿ ಅವರು ಬೀಳ್ಕೊಟ್ಟರಂತೆ. ಇನ್ನೊಮ್ಮೆ ಅವರ ಕಾರ್ಯಕ್ರಮಕ್ಕೆ ಸಾಕ್ಷಾತ್ ಮುಖ್ಯಮಂತ್ರಿಗಳೇ ಆಗಮಿಸಿದ್ದರೂ, ಇನ್ನೆರೆಡು ಹಾಡು ಹಾಡಿದ ಬಳಿಕ ಮೈಕ್ ನಿಮ್ಮ ಕೈಗೆ ಕೊಡುತ್ತೇನೆ ಎಂದರಂತೆ, ಅಂತೆಯೇ ಎರೆಡು ಹಾಡು ಹಾಡುವವರೆಗೂ ಮುಖ್ಯಮಂತ್ರಿಗಳು ತಾಳ್ಮೆಯಿಂದ ಕುಳಿತು ಅವರ ಹಾಡು ಕೇಳಿದರಂತೆ.

ಬಳಿಕ ಅಶ್ವಥ್ ರವರು ಹಾಡಿದ್ದ ಕುವೆಂಪು ವಿರಚಿತ ಗೀತೆಯೊಂದನ್ನು ಶ್ರೀಮತಿ ಸೋನಿಯಾ ಗೌತಮ್ ರವರು ಸುಶ್ರಾವ್ಯವಾಗಿ ಹಾಡಿದರು.
ಶ್ರೀ ವೀರೇಂದ್ರರವರು "ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ’ ಹಾಡನ್ನು ಹಾಡಿ ವಿಷ್ಣುವರ್ಧನ್ ರವರಿಗೆ ಅರ್ಪಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಮಲ್ಲಿಕಾರ್ಜುನ ಗೌಡ,ನಮ್ಮ ಟೀವಿ ಪ್ರತಿನಿಧಿ ಶ್ರೀ ವಿನಯ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.


ಅಂತಿಮವಾಗಿ ಶ್ರೀ ಸದಾನ್ ದಾಸ್ ವಂದನಾರ್ಪಣೆ ಸಲ್ಲಿಸಿದರು.

ಶ್ರೀ ಮಧುಸೂಧನ್ ರವರು ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದರು.

ಕನ್ನಡಧ್ವನಿ.ಕಾಂ ನ ಶ್ರಿ ಗೋಪಿನಾಥ ರಾವ್, ಕೊಂಕಣಿ ಕವಿ ಶ್ರೀ ಆರ್ಥರ್ ರೋಷನ್ ಪಿರೀರಾ, ಗಲ್ಫ್ ಕನ್ನಡಿಗ ದ ಶ್ರೀ ಬಿ.ಜಿ. ಮೋಹನದಾಸ್ ಹಾಗೂ ಅಶೋಕ್ ಬೆಳ್ಮಣ್, ಶಾರ್ಜಾ ಕರ್ನಾಟಕದ ಸಂಘದ ಅಧ್ಯಕ್ಷರಾದ ಶ್ರೀ ನೋಯೆಲ್ ಅಲ್ಮೇಡಾ, ದೈಜಿ ವರ್ಲ್ಡ್ ಪ್ರತಿನಿಧಿ ಶ್ರೀ ಸುಜಯ್ ಬೆಂದೂರ್, ಶ್ರೀ ಶೋಧನ್ ಪ್ರಸಾದ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಿಲ್ಲಿವಿಲ್ಲಿ ಸಂಸ್ಥೆಯ ಶ್ರೀ ಸತೀಶ್ ವೆಂಕಟರಮಣ ರವರು ಆಗಮಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಬೀಳ್ಕೊಟ್ಟರು.


ಚಿತ್ರ, ವರದಿ:ಅರ್ಶದ್ ಹುಸೇನ್, ದುಬೈ.